ಸರಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿ ಕ್ಷೇತ್ರದ ಎಲ್ಲಾ ಗ್ರಾಮಗಳ ಅಭಿವೃದ್ಧಿ ಮಾಡಲಾಗುವುದು ಕ್ಷೇತ್ರದ ಜನರ ಸೇವೆಗಾಗಿ ಹಗಲಿರುಳು ಶ್ರಮಿಸುವುದು ನನ್ನ ಪ್ರಮುಖ ಕರ್ತವ್ಯವಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಸುಪ್ರಸಿದ್ಧ ಶ್ರೀ ಹೊನ್ನಿಕೇರಿ ಸಿದ್ಧೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು
ಸುಮಾರು ₹70 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಈ ಕಾಮಗಾರಿ ಶೀಘ್ರ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಕಾಮಗಾರಿಯ ಮೇಲೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ರಸ್ತೆ ಅಭಿವೃದ್ಧಿಯಿಂದ ಭಕ್ತರ ಸಂಚಾರ ಸುಗಮವಾಗುವುದರ ಜೊತೆಗೆ ಸ್ಥಳೀಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಸರಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮುಂದುವರೆಯಲಿದೆ. ಮೂಲಸೌಕರ್ಯ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತ ಜನರ ಅಗತ್ಯಗಳಿಗೆ ತಕ್ಷಣ ಸ್ಪಂದಿಸಲು ಸಿದ್ಧನಿದ್ದೇನೆ ಎಂದರು.
ಬೆಟ್ಟಗಳ ಮಧ್ಯೆ ಇರುವ ಬೀದರ್ ತಾಲೂಕಿನ ಹೊನ್ನಿಕೇರಿ ಗ್ರಾಮದಲ್ಲಿನ ಶ್ರೀ ಕ್ಷೇತ್ರ ಹೊನ್ನಿಕೇರಿ ಸಿದ್ಧೇಶ್ವರ ದೇಗುಲವು ಶತಮಾನಗಳ ಇತಿಹಾಸ ಹೊಂದಿದ ಪವಿತ್ರ ಕ್ಷೇತ್ರವಾಗಿದೆ. ಹಲವು ವಿಸ್ಮಯಗಳನ್ನು ತನ್ನೊಳಗೆ ಇಟ್ಟುಕೊಂಡಿರುವ ಈ ದೇವಾಲಯ ಬೀದರ್ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ರಾಜ್ಯದ ವಿವಿಧ ಭಾಗಗಳೊಂದಿಗೆ ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಭಕ್ತರು ಭೇಟಿ ನೀಡುತ್ತಾರೆ.
ಸುಸಜ್ಜಿತ ರಸ್ತೆ ನಿರ್ಮಾಣದಿಂದ ಭಕ್ತರ ಸಂಚಾರ ಇನ್ನಷ್ಟು ಸುಗಮವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹಣಮಂತರಾವ ಮೈಲಾರೆ, ಸಂಜುಕುಮಾರ ಮಾಶೆಟ್ಟಿ, ಭೀಮರಾವ ಖೇಲ್ವಾ, ಸಚೀನ್ ಕೋಣಿ, ಸಿದ್ದಯ್ಯ ಸ್ವಾಮಿ, ಶಿವಾನಂದ ಸ್ವಾಮಿ, ಸಂತೋಷ್ ರೆಡ್ಡಿ, ರಾಜಶೇಖರ ನೌಬಾದೆ, ಶಿವಕುಮಾರ ಕೋಳಾರೆ, ರಾಜು ಖೆಲ್ವಾ, ದೇವೇಂದ್ರ ರೆಡ್ಡಿ, ವಿಲಾಶ, ಸುರೇಶ, ಮಚ್ಚಿಂದ್ರ, ಚನ್ನಬಸವ ಘಾಳೆ, ಅಮರ ಕಪಲಾಪುರ, ವಿಶಾಲ ಅತಿವಾಳ ಗ್ರಾಮದ ಮತ್ತಿತರರು ಉಪಸ್ಥಿತರಿದ್ದರು.
Related