1
1

ಬೀದರ್, ಆ.೧೦: “ತನ್ನ ದೇಹವನ್ನು ಪೂಜಿಸುವ ಮೊದಲು ತಾಯ್ನಾಡನ್ನು ಪೂಜಿಸುವ ಮನೋಭಾವ ಪ್ರತಿಯೊಬ್ಬ ಭಾರತೀಯನಲ್ಲೂ ಮೂಡಬೇಕು. ದೇಶ ಇದ್ದರೆ ನಾವು ಇದ್ದೇವೆ; ಆದ್ದರಿಂದ ದೇಶಭಕ್ತಿಯೇ ಶ್ರೇಷ್ಠ ಧರ್ಮ” ಮತ್ತು ರಾಜಕೀಯ ಪಕ್ಷಗಳ ನಾಯಕರು ಅಧಿಕಾರ ಮತ್ತು ಹುದ್ದೆಯ ಹಿಂದೆ ಓಡುವುದಕ್ಕಿಂತ ನಿಸ್ವಾರ್ಥವಾಗಿ ಜನರ ಸೇವೆ ಮಾಡಿದರೆ, ಪದವಿ ಮತ್ತು ಗೌರವ ತಾನಾಗಿಯೇ ಅವರನ್ನು ಹುಡುಕಿಕೊಂಡು ಬರುತ್ತದೆ ಎಂದು ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿಯವರು ಕರೆ ನೀಡಿದರು.
ಬೀದರ್ನಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಸೇವೆಯೇ ದೇವಸೇವೆಯ ಪರಮ ರೂಪವಾಗಿದೆ ಎಂದು ಹೇಳಿದರು. ವ್ಯಕ್ತಿಯ ಬದುಕಿನಲ್ಲಿ ಸ್ವಾರ್ಥಕ್ಕಿಂತ ರಾಷ್ಟ್ರಹಿತವೇ ಮೇಲು ಎಂಬ ಚಿಂತನೆ ಪ್ರತಿಯೊಬ್ಬ ನಾಗರಿಕನಲ್ಲಿ ಬೆಳೆಯಬೇಕಾಗಿದೆ. ಯುವಕರು ದೇಶದ ಇತಿಹಾಸ, ಸಂಸ್ಕೃತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಅರಿತು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂದಿನ ಸಮಾಜದಲ್ಲಿ ದೇಶಪ್ರೇಮ, ಶಿಸ್ತು ಮತ್ತು ಸೇವಾ ಮನೋಭಾವ ಹೆಚ್ಚಿದರೆ ಭಾರತ ವಿಶ್ವಕ್ಕೆ ಆದರ್ಶ ರಾಷ್ಟ್ರವಾಗಿ ಮತ್ತಷ್ಟು ಬೆಳೆಯಲಿದೆ. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪಾಲುದಾರರಾಗಬೇಕು ಎಂದು ಅವರು ಹೇಳಿದರು.
ಧರ್ಮವು ಮಾನವೀಯತೆಯನ್ನು ಬೆಳೆಸಬೇಕು. ದೇಶದ ಏಕತೆ, ಅಖಂಡತೆ ಮತ್ತು ಸೌಹಾರ್ದವನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಪವಿತ್ರ ಹೊಣೆಗಾರಿಕೆಯಾಗಿದೆ. “ದೇಹ ಪೂಜೆಗಿಂತ ಮೊದಲು ದೇಶ ಪೂಜಿಸು” ಎಂಬ ಸಂದೇ ಶವನ್ನು ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ ನಿಜವಾದ ರಾಷ್ಟ್ರಭಕ್ತಿ ಅರಳುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ರಾಜಕೀಯ ಪಕ್ಷಗಳ ನಾಯಕರು ಅಧಿಕಾರ ಮತ್ತು ಹುದ್ದೆಯ ಹಿಂದೆ ಓಡುವುದಕ್ಕಿಂತ ನಿಸ್ವಾರ್ಥವಾಗಿ ಜನರ ಸೇವೆ ಮಾಡಿದರೆ, ಪದವಿ ಮತ್ತು ಗೌರವ ತಾನಾಗಿಯೇ ಅವರನ್ನು ಹುಡುಕಿಕೊಂಡು ಬರುತ್ತದೆ ಎಂದು ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿಯವರು ಹೇಳಿದರು.
ಜನಪ್ರತಿನಿಧಿಗಳನ್ನು ಉದ್ದೇಶಿಸಿ ದಿವ್ಯ ಸಂದೇಶ ನೀಡಿದ ಅವರು, ಜನರು ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕ ವಾಗಿ ನಿರ್ವಹಿಸುವುದೇ ನಿಜವಾದ ರಾಜಕೀಯ ಧರ್ಮವಾಗಿದೆ. ಅಧಿಕಾರವು ಸೇವೆಗೆ ಹೊರತು ವೈಯಕ್ತಿಕ ಪ್ರತಿಷ್ಠೆಗಾಗಿ ಬಳಸಬಾರದು ಎಂದು ಕಿವಿಮಾತು ಹೇಳಿದರು.
“ಎಲ್ಲರೂ ಸಮಯವನ್ನು ವ್ಯರ್ಥ ಮಾಡದೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸಿದರೆ ನಿಮ್ಮ ಪದವಿ ಶಾಶ್ವತವಾಗಿ ಜನರ ಹೃದಯದಲ್ಲಿ ಉಳಿಯುತ್ತದೆ. ಜನರ ಪ್ರೀತಿ ಮತ್ತು ಆಶೀರ್ವಾದವೇ ಅತ್ಯಂತ ದೊಡ್ಡ ಗೌರವ” ಎಂದು ಅವರು ತಿಳಿಸಿದರು.
ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲದೆ ಸದಾ ಜನರ ಮಧ್ಯೆ ಇದ್ದು ಅವರ ಕಷ್ಟ-ಸುಖಗಳಿಗೆ ಸ್ಪಂದಿಸಬೇಕು. ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿ, ಭ್ರಷ್ಟಾಚಾರದಿಂದ ದೂರವಿದ್ದು ಪ್ರಾಮಾಣಿಕ ಆಡಳಿತ ನೀಡಿದರೆ ಸಮಾಜದಲ್ಲಿ ಉತ್ತಮ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ದೇಶದ ಅಭಿವೃದ್ಧಿಗೆ ರಾಜಕೀಯ ನಾಯಕರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಜನರ ವಿಶ್ವಾಸ ಉಳಿಸಿಕೊಳ್ಳುವವರೇ ನಿಜವಾದ ನಾಯಕರು ಎಂದು ಶ್ರೀಗಳು ಕರೆ ನೀಡಿದರು. ಈ ಸಂದರ್ಭದಲ್ಲಿ ಭಕ್ತರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಶ್ರೀಗಳ ಸೇವಾ ಸಂದೇಶವನ್ನು ಹಾಗೂ ಶ್ರೀಗಳ ರಾಷ್ಟ್ರಪ್ರೇಮದ ಸಂದೇಶಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.
Subscribe to get the latest posts sent to your email.