1
1

ಬೀದರ್: ಜಮಾ ಅತೆ ಇಸ್ಲಾಮಿ ಹಿಂದ್ ವತಿಯಿಂದ ಆಗಸ್ಟ್ 26 ರಿಂದ ಸೆಪ್ಟೆಂಬರ್ 6ರ ವರೆಗೆ ರಾಜ್ಯದಾದ್ಯಂತ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ) ಕುರಿತು ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಆಸಿಫುದ್ದೀನ್ ಹಾಗೂ ಬೀದರ್ ಘಟಕದ ಮಾಧ್ಯಮ ಉಪ ಸಂಚಾಲಕ ಮುಹಮ್ಮದ್ ನಿಝಾಮುದ್ದೀನ್ ಅಭಿಯಾನ ಕುರಿತು ಮಾಹಿತಿ ನೀಡಿದರು.
ಅಭಿಯಾನದ ಪ್ರಯುಕ್ತ ಬೀದರ್ ನಗರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಭಿಯಾನ ಅವಧಿಯಲ್ಲಿನ ಎರಡೂ ಶುಕ್ರವಾರ ಮಸೀದಿಗಳಲ್ಲಿ ಪ್ರವಚನ ಜರುಗಲಿದೆ. ಪ್ರವಾದಿ ಮುಹಮ್ಮದ್(ಸ) ರ ಕುರಿತ ಮಾನವ ಮನಸ್ಸಿನ ಕೃಷಿಕ ಮನದೊಡೆಯ ಮುಹಮ್ಮದ್(ಸ) ಹಾಗೂ ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ) ಕೃತಿ ಬಿಡುಗಡೆ ಆಗಲಿವೆ ಎಂದು ತಿಳಿಸಿದರು.
ಪ್ರವಾದಿ ಮುಹಮ್ಮದ್(ಸ) ಅವರ ಜನ್ಮದಿನವಾದ ಆಗಸ್ಟ್ 26 ರಂದು ನಗರದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಹಣ್ಣು ಹಂಪಲು ವಿತರಿಸಲಾಗುವುದು ಎಂದು ತಿಳಿಸಿದರು.
ಆಗಸ್ಟ್ 30 ರಂದು ಬೆಳಿಗ್ಗೆ 11ಕ್ಕೆ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗುವುದು. ಇದೇ ಸ್ಥಳದಲ್ಲಿ ಸೆಪ್ಟೆಂಬರ್ 9 ರಂದು ಸಂಜೆ 7ಕ್ಕೆ ‘ಮೇಜಿನ ಮಾತು’ ನಡೆಸಲಾಗುವುದು. ಸಾರ್ವಜನಿಕರನ್ನು ವೈಯಕ್ತಿಕವಾಗಿ ಭೇಟಿಯಾಗಿ ಪ್ರವಾದಿ ಮುಹಮ್ಮದ್(ಸ)ರ ಮಡೀಚಿಕೆ ಹಾಗೂ ಸೀರತ್ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಸೆಪ್ಟೆಂಬರ್ 6 ರಂದು ಬೆಳಿಗ್ಗೆ 11ಕ್ಕೆ ವಿಜ್ಡಮ್ ಕಾಲೇಜಿನಲ್ಲಿ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಸಾಮಾಜಿಕ ಕ್ರಾಂತಿಯ ಜ್ಯೋತಿ- ಪ್ರವಾದಿ ಮುಹಮ್ಮದ್ (ಸ) ಕುರಿತು ಹಾಗೂ ಪಿಯುಸಿಯಿಂದ ಪದವಿ ವರೆಗಿನ ವಿದ್ಯಾರ್ಥಿಗಳಿಗೆ ‘ಆರ್ಥಿಕ ಕ್ರಾಂತಿಯ ಜ್ಯೋತಿ – ಪ್ರವಾದಿ ಮುಹಮ್ಮದ್ (ಸ)’ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುವುದು. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಕ್ರಮವಾಗಿ ರೂ. 5 ಸಾವಿರ, ರೂ. 3 ಸಾವಿರ ಹಾಗೂ ರೂ. 2 ಸಾವಿರ ನೀಡಲಾಗುವುದು ಎಂದು ತಿಳಿಸಿದರು.
ಪ್ರವಾದಿ ಮುಹಮ್ಮದ್(ಸ)ರ ಜೀವನ ಹಾಗೂ ಸಂದೇಶಗಳನ್ನು ಜನರಿಗೆ ತಿಳಿಸುವುದು, ಪ್ರವಾದಿ ಅವರ ಕುರಿತ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಹಾಗೂ ಸಮಾಜದಲ್ಲಿ ಸೌಹಾರ್ದತೆ ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.
ಅಭಿಯಾನದ ಯಶಸ್ವಿಗಾಗಿ ಜಮಾ ಅತೆ ಇಸ್ಲಾಮಿ ಹಿಂದ್ ಬೀದರ್ ಘಟಕದ ಅಧ್ಯಕ್ಷ ಮುಹಮ್ಮದ್ ಮೌಅಜ್ಜಮ್ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸ್ವಾಗತ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಜಮಾ ಅತೆ ಇಸ್ಲಾಮಿ ಹಿಂದ್ ಬೀದರ್ ಘಟಕದ ಉಪಾಧ್ಯಕ್ಷ ಮುಹಮ್ಮದ್ ಆರಿಫುದ್ದೀನ್ ಇದ್ದರು.
Subscribe to get the latest posts sent to your email.