1
1

ಬೀದರ್: ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ದ್ವಿ ದಶಮಾನೋತ್ಸವ ಚಟುವಟಿಕೆಗಳಿಗೆ ಔರಾದ್ ಶಾಸಕ ಪ್ರಭು ಚವಾಣ್ ಅವರು ಇಲ್ಲಿಯ ಪ್ರತಾಪನಗರದ ಶಾಲೆಯ ಸಭಾಂಗಣದಲ್ಲಿ ಶನಿವಾರ ಚಾಲನೆ ನೀಡಿದರು.
ಜನಸೇವಾ ಶಾಲೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ. ಇಂಥ ಶಾಲೆಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳಿದರು.
ಮಕ್ಕಳಿಗೆ ಶಿಕ್ಷಣ, ಪ್ರಮಾಣ ಪತ್ರಕ್ಕಿಂತ ಸಂಸ್ಕಾರ ಬಹಳ ಅವಶ್ಯಕವಾಗಿದೆ. ಹೀಗಾಗಿ ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದು ಸಲಹೆ ಮಾಡಿದರು.
ದ್ವಿ ದಶಮಾನೋತ್ಸವ ಕಾರ್ಯಕ್ರಮಗಳ ಪರಿಚಯ ಪತ್ರ ಬಿಡುಗಡೆ ಮಾಡಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಜನಸೇವಾ ಶಾಲೆಯು ದ್ವಿ ದಶಮಾನೋತ್ಸವ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಶಾಲೆಯ ಚಟುವಟಿಕೆಗಳಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಜನಸೇವಾ ಶಾಲೆ ದ್ವಿ ದಶಮಾನೋತ್ಸವ ಸಂಭ್ರಮದಲ್ಲಿದೆ. ಈ ನಿಮಿತ್ತ 20 ವರ್ಷಕ್ಕೆ 20 ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
2027 ರ ಜನವರಿ ವರೆಗೆ ಶಿಕ್ಷಕರ ತರಬೇತಿ, ಕಾಲೇಜು ವಿದ್ಯಾರ್ಥಿಗಳ ಸಮಾವೇಶ, ನವ ದಂಪತಿಗಳ ಸಮಾವೇಶ, ಬಾಲಿಕಾ ಅರಿವು ಕಾರ್ಯಕ್ರಮ, ತೆರೆದ ಗ್ರಂಥಾಲಯ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ದ್ವಿ ದಶಮಾನೋತ್ಸವ ಯಶಸ್ವಿಗೆ ಈಗಾಗಲೇ ಗಣ್ಯರನ್ನು ಒಳಗೊಂಡ ಸ್ವಾಗತ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ದ್ವಿ ದಶಮಾನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಶರಣಪ್ಪ ಸಿಕೇನಪುರ, ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ ಮಾತನಾಡಿದರು. ಸೇವೆಯಿಂದ ನಿವೃತ್ತರಾದ ಅಶೋಕ ಮಹಾಲಿಂಗ ಅವರನ್ನು ಸನ್ಮಾನಿಸಲಾಯಿತು.
ಸ್ವಾಗತ ಸಮಿತಿಯ ಸಂಚಾಲಕ ಬಿ.ಎಸ್. ಕುದರೆ ಅಧ್ಯಕ್ಷತೆ ವಹಿಸಿದ್ದರು. ಗುರುನಾನಕ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಬಲಬೀರ್ಸಿಂಗ್, ವಿದ್ಯಾಭಾರತಿ ಜಿಲ್ಲಾ ಅಧ್ಯಕ್ಷ ಎಸ್.ಬಿ. ಸಜ್ಜನಶೆಟ್ಟಿ, ಜನಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸ್ವಾಮಿ, ಖಜಾಂಚಿ ಶಿವರಾಜ ಹುಡೇದ್, ಸದಸ್ಯ ಶಿವಲಿಂಗಪ್ಪ ಜಲಾದೆ, ರಾಮಶೆಟ್ಟಿ ಪನ್ನಾಳೆ ಇದ್ದರು.
ಶಿಕ್ಷಕಿ ನಿರ್ಮಲಾ ನಿರೂಪಿಸಿದರು. ಶಿಕ್ಷಕಿ ರೇಣುಕಾ ಸ್ವಾಗತಿಸಿದರು. ಶಿಕ್ಷಕ ಸತೀಶಕುಮಾರ ವಂದಿಸಿದರು.