1
1

ಬೀದರ್: ನೂಲಿಯ ಚಂದಯ್ಯನವರ ವಚನಗಳಲ್ಲಿ ಗುರು, ಲಿಂಗ ಹಾಗೂ ಜಂಗಮ ನಿಷ್ಠೆ ತುಂಬಿ ತುಳುಕುತ್ತಿದೆ ಎಂದು ಪರುಷಕಟ್ಟೆ ಚನ್ನಬಸವಣ್ಣ ಹೇಳಿದರು.
ಲಿಂಗಾಯತ ಮಹಾ ಮಠದ ವತಿಯಿಂದ ನಗರದ ಬಸವಗಿರಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ 278ನೇ ಮಾಸಿಕ ಶರಣ ಸಂಗಮ ಹಾಗೂ ನೂಲಿಯ ಚಂದಯ್ಯನವರ ಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಚಂದಯ್ಯನವರ ವಚನಗಳು ಸರಳ, ಸುಂದರ ಹಾಗೂ ಅರ್ಥಪೂರ್ಣವಾಗಿವೆ. ಮನುಜರಿಗೆ ಮಾರ್ಗದರ್ಶಿಯಾಗಿವೆ ಎಂದು ತಿಳಿಸಿದರು.
ಚಂದಯ್ಯನವರ ಒಟ್ಟು 48 ವಚನಗಳು ಲಭಿಸಿವೆ. ಅವರ ವಚನಾಂಕಿತ ಚಂದೇಶ್ವರ ಲಿಂಗ ಆಗಿದೆ ಎಂದರು.
ಸತ್ಯಶುದ್ಧ ಕಾಯಕ, ನಿತ್ಯ ದಾಸೋಹ ಚಂದಯ್ಯನವರ ಉಸಿರಾಗಿದ್ದವು. ಶೂನ್ಯ ಸಂಪಾದನೆಯಲ್ಲಿ ಅವರ ಎದೆಯಿಂದ ಲಿಂಗ ಜಾರಿದ ಪ್ರಸಂಗ ಹಾಗೂ ಇಷ್ಟಲಿಂಗದ ಅವಶ್ಯಕತೆಯನ್ನು ವಿವರಿಸಿದರು.
ಲಿಂಗಪೂಜೆ, ಗುರು ಸೇವೆ ಹಾಗೂ ಜಂಗಮ ದಾಸೋಹ ನಿಜವಾದ ಶರಣನ ಸಂಭ್ರಮ. ಈ ಮೂರರ ಅಳವಡಿಕೆಯಿಂದ ಶಿವಯೋಗ ಸಿದ್ಧಿಸುತ್ತದೆ ಎಂದು ತಿಳಿಸಿದರು.
ಮುಖ್ಯ ಅನುಭಾವ ಮಂಡಿಸಿದ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಪ್ರೊ. ಉಮಾಕಾಂತ ಮೀಸೆ ಅವರು, ವಿಜಯಪುರ ಜಿಲ್ಲೆಯ ಶಿವಣಿಯಲ್ಲಿ ಜನಿಸಿದ ನೂಲಿಯ ಚಂದಯ್ಯ ಕಾಯಕ ಯೋಗಿ ಎಂದೇ ಪ್ರಸಿದ್ಧಿ ಪಡೆದಿದ್ದರು ಎಂದು ಹೇಳಿದರು.
ಬಸವಣ್ಣನವರತ್ತ ಆಕರ್ಷಿತರಾಗಿ, ಕಲ್ಯಾಣಕ್ಕೆ ಬಂದು ನೆಲೆಸಿದ್ದರು. ನೂಲಿನಿಂದ ಹಗ್ಗ-ಕಣ್ಣಿ ಮಾಡಿ ಮಾರಾಟ ಮಾಡಿ, ಗುರು, ಲಿಂಗ-ಜಂಗಮರಿಗೆ ಭಕ್ತಿಯಿಂದ ದಾಸೋಹಗೈಯುತ್ತಿದ್ದರು ಎಂದು ತಿಳಿಸಿದರು.
ಹುಲ್ಲಿನ ಮೆದೆ ಕೊಯ್ಯುವ ಕಾಯಕದಲ್ಲಿ ನಿರತರಾದಾಗ ಕೊರಳ ಲಿಂಗ ಜಾರಿ ನೀರಿಗೆ ಬಿದ್ದರೂ ಲೆಕ್ಕಿಸದೆ, ಕಾಯಕದಲ್ಲಿ ನಿರತರಾಗಿದ್ದರು. ಯಾರೇ ಆದರೂ ದುಡಿದು ಉಣ್ಣಬೇಕೆಂಬುದು ಅವರ ಉಪದೇಶ. ಲಿಂಗಯ್ಯನಿಗೂ ಹಗ್ಗ-ಕಣ್ಣಿ ಕಾಯಕದಲ್ಲಿ ತೊಡಗಿಸಿದ ಹೆಗ್ಗಳಿಕೆ ಚಂದಯ್ಯನವರದ್ದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 30 ವರ್ಷ ಅಪಘಾತ ರಹಿತ ಬಸ್ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಮೇಶ್ ಭದ್ರಪ್ಪನೋರ ಹಾಗೂ ಸಂಗೀತಾ ದಂಪತಿಯನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಪ್ರವೀಣ್ ಬರಗಲ್ ಉದ್ಘಾಟಿಸಿದರು. ಉದ್ಯಮಿ ಸಂತೋಷ್ ಪಾಟೀಲ ಅಧ್ಯಕ್ಷತೆ, ಅಶೋಕ ಎಲಿ ಸಮ್ಮುಖ ವಹಿಸಿದ್ದರು. ಸಾಹಿತಿ ರಮೇಶ ಮಠಪತಿ ಇದ್ದರು.
ಡಾ. ಬಸವದೀಪ್ತಿ ಗೋರನಾಳೆ ವಚನ ಗಾಯನ ಮಾಡಿದರು. ನೀಲಮ್ಮನ ಬಳಗದವರು ಪ್ರಾರ್ಥನೆ ನಡೆಸಿಕೊಟ್ಟರು. ಕದಳಿಶ್ರೀ ಮುತ್ತಂಗೆ ಸ್ವಾಗತಿಸಿದರು. ಶೋಭಾ ಅಣವೀರ ಕೂಡಂಬಲ್ ಭಕ್ತಿ ದಾಸೋಹಗೈದರು.
Subscribe to get the latest posts sent to your email.