1
1

ಬೀದರ: ಜಿಲ್ಲೆಯಲ್ಲಿರುವ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯಗಳ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಟ್ರೈಬಲ್ ಮ್ಯೂಸಿಯಂ ನಿರ್ಮಿಸಬೇಕು ಎಂದು ಬೀದರ ಜಿಲ್ಲಾ ಆದಿವಾಸಿ ರಕ್ಷಣಾ ಪರಿಷತ್ತು ಹಾಗೂ ಜಿಲ್ಲಾ ಆದಿವಾಸಿ ಸಾಹಿತ್ಯ ಪರಿಷತ್ತು ಆಗ್ರಹಿಸಿವೆ.
ನಗರದ ಬೋಮಗೊಂಡೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯ ಸಾಹಿತಿ ಮಾಣಿಕ ನೇಳಗಿ ಮಾತನಾಡಿದರು. ಬುಡಕಟ್ಟು ಸಮುದಾಯಗಳು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾದಾಗ ಮಾತ್ರ ಆದಿವಾಸಿಗಳ ಸಮಗ್ರ ಅಭಿವೃದ್ಧಿ ಸಾಧ್ಯ. ಹೀಗಾಗಿ ಸಮುದಾಯದ ಯುವಜನರು ಉನ್ನತ ಶಿಕ್ಷಣ ಪಡೆಯುವತ್ತ ಹೆಚ್ಚಿನ ಗಮನಹರಿಸಬೇಕು ಎಂದರು.
ಬೀದರ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಅವರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಹಾಗೂ ಸಮಾಜ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆದಿವಾಸಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಡುಮ್ಮೆ ಮಾತನಾಡಿ, ದಕ್ಷಿಣ ಭಾರತದ ಟ್ರೈಬಲ್ ಐಕಾನ್ ಮಹಾತ್ಮ ಬೊಮ್ಮಗೊಂಡರು ಬೀದರ ಜಿಲ್ಲೆಯ ನೆಲದಲ್ಲಿ ಜನಿಸಿರುವುದು ಹೆಮ್ಮೆಯ ಸಂಗತಿ ಎಂದರು. ಅವರ ಜನ್ಮಸ್ಥಳ ಚಿದ್ರಿಯಲ್ಲಿರುವ ವಿಮಾನ ನಿಲ್ದಾಣಕ್ಕೆ ಬೊಮ್ಮಗೊಂಡರ ಹೆಸರಿಡಬೇಕು. ಬೀದರ ಕೋಟೆಯಲ್ಲಿರುವ ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಅವರ ಹೆಸರಿನ ಕೆರೆಯನ್ನೂ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಗೊಂಡ, ಕೋಲ್, ಮುಂಡಾ, ಭಿಲ್, ಸಂತಾಲ್ ಸೇರಿದಂತೆ ದೇಶದ ವಿವಿಧ ಬುಡಕಟ್ಟು ಸಮುದಾಯಗಳ ಇತಿಹಾಸವನ್ನು ಸ್ಮರಿಸದೆ ಭಾರತದ ಆದಿವಾಸಿ ಇತಿಹಾಸ ಪೂರ್ಣವಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.
ಗೊಂಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ ಚಿಮಕೋಡ, ಜಿಲ್ಲಾ ಟೋಕರೆ ಕೋಳಿ ಸಮಾಜದ ಉಪಾಧ್ಯಕ್ಷ ಸುನೀಲ ಕಾಶಂಪೂರ, ರವಿ ಢೋಣೆ, ಪ್ರಭು ಮೇತ್ರೆ, ಸಂಗೊಳ್ಳಿ ರಾಯಣ್ಣ ಯುವಗರ್ಜನೆ ಪ್ರಧಾನ ಕಾರ್ಯದರ್ಶಿ ಕುಮಾರ ಹಜ್ಜರಗಿ, ಆದಿವಾಸಿ ಸಮುದಾಯದ ಮುಖಂಡರಾದ ರಮೇಶ ಬಾಲೆಬಾಯಿ, ವಿವೇಕ ರಾಜಗೊಂಡ, ಮಹೇಶ ಮೇದಾ ಸೇರಿದಂತೆ ಹಲವರು ಭಾಗವಹಿಸಿದ್ದರು.
Subscribe to get the latest posts sent to your email.