ಸಂತ ಸೇವಾಲಾಲ್ ಮಹಾರಾಜರ 287 ನೇ ಜಯಂತಿಯ ನಿಮಿತ್ತ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ. ಚವ್ಹಾಣ ಅವರು ಫೆ.15 ರಂದು ಘಮಸುಬಾಯಿ ತಾಂಡಾ ಬೋಂತಿಯ ಗೃಹ ಕಛೇರಿಯಲ್ಲಿ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.
ನಂತರ ಮಾತನಾಡಿದ ಶಾಸಕರು, ಸಂತ ಸೇವಾಲಾಲ್ ಮಹಾರಾಜರು ದೇಶ ಕಂಡ ಬಹುದೊಡ್ಡ ಸಂತ, ಮಹಾ ತಪಸ್ವಿ, ಬಂಜಾರಾ ಸಮುದಾಯದ ಧರ್ಮಗುರು, ಸಮಾಜ ಸುಧಾರಕರು. ವಿಶೇಷವಾಗಿ ಬಂಜಾರಾ ಸಮಾಜದ ಉನ್ನತಿಗೆ ಹುಟ್ಟಿ ಬಂದ ಅವತಾರ ಪುರುಷರು. ಹಿಂದೆ ಬಂಜಾರಾ ಸಮಾಜವು ಅನಕ್ಷರತೆ, ಅಂಧಶ್ರದ್ಧೆ ಮತ್ತು ಬಡತನದಂತಹ ನಾನಾ ಸಮಸ್ಯೆಗಳಿಂದ ಬಳಲಿತ್ತು. ಸಾಮಾಜಿಕವಾಗಿ, ಆರ್ಥಿಕವಾಗಿ ತೀವ್ರ ಹಿಂದುಳಿದಿತ್ತು. ಅಂತಹ ಸಮಯದಲ್ಲಿ ಸಂತ ಸೇವಾಲಾಲ್ ಮಹಾರಾಜರು ಸಮಾಜದಲ್ಲಿ ಜಾಗೃತಿ ಮೂಡಿಸಿ, ಶಿಸ್ತು, ನೈತಿಕತೆ ಮತ್ತು ಸಮಾನತೆಯ ಸಂದೇಶ ಸಾರಿದರು.
ದುರ್ಮಾರ್ಗ, ದುಶ್ಚಟಗಳಿಗೆ ಸಿಲುಕಿದ್ದ ಅನೇಕರ ಜೀವನವನ್ನು ಅವರು ಸತ್ಸಂಗ, ಸನ್ಮಾರ್ಗ ಮತ್ತು ಉತ್ತಮ ಮೌಲ್ಯಗಳ ಮೂಲಕ ಪರಿವರ್ತಿಸಿದ್ದರು. ಸಮಾಜದಲ್ಲಿ ನೈತಿಕತೆ, ಸತ್ಯನಿಷ್ಠೆ, ಭಕ್ತಿ ಮತ್ತು ಶ್ರಮದ ಮಹತ್ವವನ್ನು ಸಾರಿದ್ದರು. ಅಂಧಶ್ರದ್ಧೆಗಳನ್ನು ದೂರ ಮಾಡಿ, ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿ, ಆತ್ಮಗೌರವದಿಂದ ಬದುಕುವಂತೆ ಕಲಿಸಿಕೊಟ್ಟ ಮಹಾನ್ ಗುರುಗಳು ಎಂದು ಹೇಳಿದರು.
Related