1
1

ಬೀದರ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಂದೇ ಮಾತರಂ ಗೆ150ನೇ ವರ್ಷದ ಸಂಭ್ರಮದ ನಿಮಿತ್ತ ಎಬಿವಿಪಿ ಬೀದರ (ಕರ್ನಾಟಕ ಉತ್ತರ ಪ್ರಾಂತ) ವತಿಯಿಂದ 250 ಮೀಟರ್ ಉದ್ದದ ತಿರಂಗ ಯಾತ್ರೆಯನ್ನು ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ಭಾಲ್ಕಿಯ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿರಂಗಾ ಯಾತ್ರೆಗೆ ಚಾಲನೆ ನೀಡಿದರು.
ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಈ ತಿರಂಗ ಯಾತ್ರೆಯಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿ ಗಮನಸೆಳೆದರು. ನಗರದ ಗುಂಪ ಶ್ರೀ ಸಿದ್ಧಾರೂಢ ಮಠ ಆವರಣದಿಂದ ಪ್ರಾರಂಭವಾದ ಯಾತ್ರೆ, ನಗರದ ಕುಂಬಾರವಾಡ ವೃತ್ತ, ಕರ್ನಾಟಕಪದವಿ ಪೂರ್ವ ಕಾಲೇಜ, ಯುನೈಟೆಡ್ ಆಸ್ಪತ್ರೆಯಿಂದ, ಬಿ.ವಿ.ಬಿ ಸೈನಿಕ ಶಾಲೆಯವರಿಗೆ ತಲುಪಿತು. ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಎಬಿವಿಪಿ ಕಾರ್ಯಕರ್ತರು ಭಾಗವಹಿಸಿ, ದೇಶಭಕ್ತಿಯ ನಾನಾ ಘೋಷಣೆಗಳೊಂದಿಗೆ ತಿರಂಗ ಯಾತ್ರೆಯನ್ನು ಅತ್ಯಂತ ಅದ್ದೂರಿಯಾಗಿ ಯಶಸ್ವಿಗೊಳಿಸಿದರು.
ಸ್ವಾತಂತ್ರ್ಯ ದಿನಾಚರಣೆ ಹಾಗೂ ವಂದೇ ಮಾತರಂ 150ನೇ ವರ್ಷದ ಸಂಭ್ರಮದ ವಿಷಯವೇ ರೋಮಾಂಚನ. ಇದೊಂದು ಘೋಷಣೆಯಲ್ಲ, ರಾಷ್ಟ್ರಜಾಗೃತಿಯ ದಿವ್ಯಮಂತ್ರವಾಗಿ ದೇಶ-ವಿದೇಶಗಳಲ್ಲಿ ಜನರೆದೆಯನ್ನು ತಟ್ಟಿ ಮುಟ್ಟಿ ಕುಟ್ಟಿ ಎಬ್ಬಿಸಿದ್ದು ಇತಿಹಾಸದ ಸತ್ಯ ಸಂಗತಿ. ಜನಮನದ ಭಾವನೆಯನ್ನು ಅರಿತು, ದೇಶಭಕ್ತರೆಲ್ಲರ ನಾಡಿ ಮಿಡಿತವನ್ನು ತಿಳಿದು ಹೃದಯದ ಬಡಿತವನ್ನು ಗುರುತಿಸಿ ಬಂಕಿಮಚಂದ್ರರು ನೀಡಿದ ನವ ಪಂಚಾಕ್ಷರಿ ಮಂತ್ರವೇ ‘ವಂದೇ ಮಾತರಂ’, ಅರಿಯದವರಿಗೆ ಇದೊಂದು ಎರಡು ಶಬ್ದಗಳ ಜೋಡಿ ಎನಿಸಿದಲ್ಲಿ- ಅರಿತವರಿಗೆ ಇದರಿಂದಾದ ಮೋಡಿ ಅಕ್ಷರಗಳಲ್ಲಿ ವರ್ಣಿಸುವುದು ಅಸಾಧ್ಯ. ಸ್ವಾಭಿಮಾನದ ಪ್ರತೀಕವಾದ ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ದೇಶದೆಲ್ಲೆಡೆ ಬಗೆಬಗೆಯ ಆಂದೋಲನಗಳು ನಡೆದಿದ್ದನ್ನು ಚರಿತ್ರೆಯಲ್ಲಿ ತಿಳಿದಿದ್ದೇವೆ. ಸೋಲರಿಯದ ತಾಯಿ ಭಾರತೀಯ ಸಂತತಿಗೆ ಅನ್ಯಾಯದ ವಿರುದ್ಧ ಸಿಡಿದೇಳುವ ಬಗೆಬಗೆಯ ಸಾಧನಗಳು ದೊರಕುತ್ತಲೇ ಇದ್ದವು. ಆಧ್ಯಾತ್ಮಿಕವಾಗಿ-ರಾಜಕೀಯವಾಗಿ ತನ್ನತನವನ್ನು ಉಳಿಸುವ ಬೆಳೆಸುವ ವಿವಿಧ ರೀತಿಯ ಜನಜಾಗೃತಿ ನಡೆಯುತ್ತಲೇ ಬಂದಿರುವುದನ್ನು ದಾಖಲಿಸಲಾಗಿದೆ. ಸತ್ಯಾಗ್ರಹ- ಕಾರಾಗೃಹ ಮೊದಲಾದ ಮಾರ್ಗದಲ್ಲಿ ಸ್ವರಾಜ್ಯ ಪ್ರಾಪ್ತಿಯ ಪ್ರಯತ್ನಗಳು ಹಲವು, ದುಷ್ಟರ ದಮನಕ್ಕೆ ಕ್ರಾಂತಿಯೇ ಸೂಕ್ತವೆಂಬ ನಿರ್ಣಯಕ್ಕೆ ಬಂದು ಕಿರಿ-ಹಿರಿಯರೆಂಬ ಭೇದವಿಲ್ಲದೆ, ದೇಶಾದ್ಯಂತ ಪರಿಶ್ರಮಿಸಿದ ಸ್ತ್ರೀ- ಪುರುಷರಿಗೇನೂ ಕೊರತೆಯಿಲ್ಲ. ಹೀಗೆ ಎಲ್ಲರಿಗೂ ಸ್ಫೂರ್ತಿ, ಕಾರ್ಯೋತ್ಸಾಹ ನೀಡಿದ ‘ವಂದೇ ಮಾತರಂ’ನ ಸ್ಮರಣೆಯೇ ಇಂದಿನ ದಿನಗಳ ದೇಶ- ವಿದೇಶಗಳ ಗೊಂದಲಗಳ ನಡುವೆಯೂ ಆತ್ಮಾಭಿಮಾನದಿಂದ ಬದುಕಲು ಪ್ರೇರಣೆ ನೀಡುತ್ತದೆಂಬುದರಲ್ಲಿ ಎರಡು ಮಾತಿಲ್ಲ. ವಂದೇ ಮಾತರಂ ಪ್ರೇರಣೆ ಇಂದಿನ ವಿದ್ಯಾರ್ಥಿಗಳಿಗೆ ಭಾವಜಾಗೃತಿಯ ಗೀತೆ ‘ವಂದೇ ಮಾತರಂ’ನ ಪ್ರಭಾವ ದೇಶದ ಹಲವೆಡೆ ಬಗೆಬಗೆಯ ಹೋರಾಟಗಳಿಗೆ ಪ್ರೇರಣೆ ನೀಡಿತು. ಎಂದು ಎಬಿವಿಪಿಯ ವಿಭಾಗ ಸಂಘಟನ ಕಾರ್ಯದರ್ಶಿಗಳಾದ ಹೇಮಂತ ಅರಳಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಸಂತೋಷ ಹಂಗರಗಿ,ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಹೇಮಂತ ಅರಳಿ, ಜಿಲ್ಲಾ ಸಂಚಾಲಕ ನಾಗರಾಜ ಸುಲ್ತಾನಪುರೆ, ಲಿಂಗದೇವ ಗುತ್ತಿ ಪ್ರಾಂತ ಸಾಮಾಜಿಕ ಜಾಲತಾಣ ಪ್ರಮುಖ, ಪವನ್ ಪಾಂಚಾಲ ಮುಖಂಡರಾದ ಬಾಬು ವಾಲಿ, ರಜನಿಷ್ ವಾಲಿ,ಗುರುನಾಥ ರಾಜಗೀರಾ,ವಿರೇಶ ಸ್ವಾಮಿ, ಸತಿಷ ಬಿರಾದಾರ, ಅನೀಲ್ ಚೌದ್ರಿ, ರಾಹುಲ್ ಓಂಕಾರ, ಮಹೇಶ ಬಿರಾದಾರ ಅಭಿಷೇಕ ರಾಂಪೂರೆ ಸಹ ಕಾರ್ಯದರ್ಶಿ, ಸಂತೋಷ ಪೂಜಾರಿ ಸೇರಿದಂತೆ ನೂರಾರು ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು
Subscribe to get the latest posts sent to your email.