Popular Posts

ಕನ್ನಡ ನಾಡಿನಲ್ಲಿ ಕನ್ನಡವೇ “ಯಜಮಾನ” ಕನ್ನಡ ಉಳಿಸಿ ಬೆಳಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ -ಮುಡುಬಿ ಗುಂಡೇರಾವ

ಕಲಬುರಗಿ,ಫೆ.16 ಜಗತ್ತಿನ ಅತ್ಯಂತ ಶ್ರೀಮಂತ ಭಾಷೆಯಲ್ಲಿ ಒಂದಾಗಿರುವ ಕನ್ನಡಕ್ಕೆ ಇಂದಿನ ಆಧುನಿಕ ಸಂಚಾರ ವಾಣಿ (ಮೊಬೈಲ್) ಮತ್ತು ಆಂಗ್ಲ ಭಾಷೆಯ ವ್ಯಾಮೋಹದ ಹಾವಳಿಯಿಂದ ಹೊಡೆತ ಬೀಳುತ್ತಿದೆ. ಇಂತಹ ಅದೆಷ್ಟೋ ಹೊಡೆತಗಳನ್ನು ಸಹಿಸಿಕೊಂಡು ಪುಟಿದೇಳುವ ಸಾಮರ್ಥ್ಯ ಕನ್ನಡಕ್ಕಿದೆ. ಕನ್ನಡ ನಾಡಿನಲ್ಲಿ ಕನ್ನಡವೇ ಯಜಮಾನವಾಗಬೇಕು. ಅನ್ಯರ ಯಜಮಾನಿಕೆ ನಮಗೆ ಬೇಡ. ನಾಡು-ನುಡಿ ಬಗ್ಗೆ ಸ್ವಾಭಿಮಾನ ಇಂದು ಎಲ್ಲೆಡೆ ಹೆಚ್ಚು ಜಾಗೃತಗೊಳ್ಳಬೇಕಾಗಿದೆ ಎಂದು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಹೇಳಿದರು.
ಸೋಮವಾರ ಕಲಬುರಗಿ ನಗರದ ಕನ್ನಡ ಭವನದ ಆವರಣದಲ್ಲಿರುವ ಬಾಪೂಗೌಡ ದರ್ಶನಾಪುರ ರಂಗಮAದಿರದ ಪೂಜ್ಯ ಶ್ರೀ ಲಿಂ. ಡಾ. ಶರಣಬಸವಪ್ಪ ಅಪ್ಪಾ ವೇದಿಕೆಯಲ್ಲಿ ಎರಡು ದಿನಗಳ ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಉಳಿಸಿ ಬೆಳೆಸುವ ಕೆಲಸ ಕೇವಲ ಸರಕಾರ ಮಾಡಿದರಷ್ಟೇ ಸಾಲದು. ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ಕನ್ನಡಿಗರಿಗೆ ಕನ್ನಡವೇ ಕೂಡಲಸಂಗಮ ಎಂಬ ಸುಭುದ್ದಿ ಮೂಡಬೇಕಾಗಿದೆ. ಕನ್ನಡ ಉದ್ಧಾರವಾಗಲು ಪ್ರತಿಯೊಬ್ಬರ ತುಡಿತ ಅಗತ್ಯ ಎಂದು ಪ್ರತಿಪಾದಿಸಿದ ಅವರು, ಅನ್ಯ ಭಾಷೆಗಳಿಗೆ ಮೊರೆ ಹೋಗದೆ ಮಾತೃಭಾಷೆಯಲ್ಲೇ ಸಾಧನೆ ಮಾಡಿ ಇತರರಿಗೆ ಪ್ರೇರಣೆಯಾಗಿ ಎಂದು ಕರೆ ಕೊಟ್ಟರು.
ಒತ್ತಾಯದಿಂದ ಭಾಷೆ ಬೆಳೆಯಲು ಸಾಧ್ಯವಿಲ್ಲ. ಪ್ರತಿ ಮನೆ-ಮನ, ಕಛೇರಿ-ಕೈಗಾರಿಕೆ, ಸಾರ್ವಜನಿಕ ಸ್ಥಳ ಹೀಗೆ ಎಲ್ಲೆಡೆ ಕನ್ನಡದ ವಾತಾವರಣ ನಿರ್ಮಿಸಬೇಕು. ಕನ್ನಡದ ಮನಸ್ಸುಗಳು ಬೆಳೆಸಿದಾಗ ಮಾತ್ರ ಭಾಷೆ ಬೆಳೆಯಲು ಸಾಧ್ಯ. ನಮ್ಮ ಹಳ್ಳಿಗಳು ಕನ್ನಡ ಸಂಸ್ಕೃತಿಯ ಜೀವಾಳವಾಗಿದೆ. ಕನ್ನಡ ಸಾಹಿತ್ಯ ರಚನೆಗೆ ನಮ್ಮ ಜಾನಪದ ಗೀತೆಗಳೆ ಪ್ರೇರಣೆಯಾಗಿವೆ ಎಂದ ಅವರು ಪ್ರತಿಯೊಬ್ಬ ವಿದ್ಯಾವಂತನು ಜ್ಞಾನ ದಾಸೋಹಕ್ಕೆ ಹಳ್ಳಿಯತ್ತ ಮುಖ ಮಾಡುವ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.
ದಯವೇ ಧರ್ಮದ ಮೂಲವಯ್ಯ ಎಂದ ವಿಶ್ವಜ್ಯೋತಿ ಬಸವಣ್ಣನವರು, ದಾಸೋಹಂ ಭಾವದಿಂದ ಶ್ರೀ ಶರಣ ಬಸವೇಶ್ವರರು ನಡೆದಾಡಿದ್ದ ಪುಣ್ಯ ನೆಲ ಇದಾಗಿದೆ. ಅಶೋಕ ಚಕ್ರವರ್ತಿ ನೆಲೆ ನಿಂತ ಸನ್ನತಿ, ಭಾವೈಕ್ಯತೆ ಸಾರಿದ ಸೂಫಿ ಸಂತ ಖ್ವಾಜಾ ಬಂದೇನವಾಜರ ತವರೂರು ಇದು. ಕನ್ನಡದ ಮೊಟ್ಟ ಉಪಲಬ್ದ ಗ್ರಂಥ ಕವಿರಾಜ ಮಾರ್ಗ ನೀಡಿದ ನೃಪತುಂಗ ನಾಡು ಕವಿಗಳು, ವಚನಕಾರರು, ತತ್ವಪದಕಾರರು, ಶರಣರು, ದಾಸರು ಮೆಟ್ಟಿದ ನೆಲ ಕಲಬುರಗಿ ಹಲವಾರು ಧರ್ಮ ಶಿಶುಗಳನ್ನು ಒಂದೇ ತೊಟ್ಟಿಲಲ್ಲಿ ಮಲಗಿಸಿ ಜೋಗುಳವ ಹಾಡಿದ ಶ್ರೇಯಸ್ಸು ಹೊಂದಿದೆ. ಬುದ್ಧ, ಬಸವ, ಅಂಬೇಡ್ಕರರು ಸಮಾನತೆ ಆಶಯದಂತೆ ಈ ನೆಲದಲ್ಲಿ ವಚನಗಳು, ತತ್ವಪದಗಳು, ದಾಸವಾಣಿಗಳು, ಜನಪದ ಗೀತೆಗಳು ಮೊಳಗಿವೆ. ವೈಚಾರಿಕ ಕ್ರಾಂತಿಗೆ ಮತ್ತು ಕಾಯಕ ದಾಸೋಹಕ್ಕೆ ಮುನ್ನುಡಿ ಬರೆದ ಪವಿತ್ರ ಕ್ಷೇತ್ರವಿದು ಎಂದು ಜಿಲ್ಲೆಯ ಸಾಹಿತ್ಯ ಸಿರಿವಂತಿಕೆ ಬಗ್ಗೆ ಸಮ್ಮೇಳನಾಧ್ಯಕ್ಷ ಮುಡಬಿ ಗುಂಡೇರಾವ ಮೆಲಕು ಹಾಕಿದರು.
ಸರಕಾರ ಅನೇಕ ಸೌಲಭ್ಯ ನೀಡಿದರೂ ಇನ್ನೂ ಅನೇಕ ಗ್ರಾಮಗಳಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ಖೇದದ ಸಂಗತಿ. ಅರ್ಧಕ್ಕೆ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಕಿತ್ತು ತಿನ್ನುವ ಬಡತನ ಇದಕ್ಕೆ ಪ್ರಮುಖ ಕಾರಣ ಎಂಬುದು ಅನೇಕರ ಅಭಿಪ್ರಾಯ. ಹಸಿದವನ ಹೊಟ್ಟೆಯಲ್ಲಿ ವೇದನೆ ಇದೆ ನಿಜ, ಆದರೆ ಅವೆಲ್ಲ ಸಮಸ್ಯೆಗಳ ನಿವಾರಣೆಗೆ ಶಿಕ್ಷಣ ಮತ್ತು ಜ್ಞಾನವೇ ಮದ್ದು ಎಂಬುದನ್ನು ಯಾರು ಮರೆಯಬಾರದು. ಇದಕ್ಕೆ ಸರಕಾರಕ್ಕೆ ದೂರುವ ಬದಲು ಪಾಲಕರು ಎಚ್ಚರಗೊಳ್ಳಬೇಕಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.
ಸರ್ಕಾರ ಶಾಲೆಗಳಿಗೆ ಕಟ್ಟಡ, ಮೂಲಸೌಕರ್ಯ ನೀಡಿದರೆ ಸಾಲದು. ಪ್ರತಿ ವರ್ಷ 10-25 ಸಾವಿರ ಶಿಕ್ಷಕರನ್ನು ಭರ್ತಿ ಮಾಡುವ ಅಗತ್ಯವಿದೆ. ಶಾಲೆಗಳಿಗೆ ಪೂರಕ ಸಿಬ್ಬಂದಿ ಇಲ್ಲದ ಕಾರಣ ಶಿಕ್ಷಕರೆ ಕಸನು ಹೊಡಿಯಬೇಕು, ಪಾಠನು ಮಾಡಬೇಕಾದ ಅನಿವಾರ್ಯತೆ ಇದೆ. ಇದು ಬದಲಾಗಬೇಕು. ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಿಸುವ ಅಗತ್ಯವಿದ್ದು, ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕಿದೆ ಎಂದ ಅವರು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪರ ಸಂಘಟನೆಗಳು ಸಾಗರೋಪಾದಿಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಬೇಕು. ಹಳ್ಳಿಯಡೆಗೆ ನುಡಿಜಾತ್ರೆ, ಜಾನಪದ ಸೊಗಡನ್ನು ಉಳಿಸುವ ವಿನೂತನ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕು ಎಂದರು.
ಮನುಷ್ಯತ್ವ ನಿರ್ಮಿಸುವ ಸಾಹಿತ್ಯ ಹೊರಹೊಮ್ಮಲಿ: ಅಹಿಂಸೆ ಮತ್ತು ಐಕ್ಯತೆ ಸಾರಿದ ರಾಷ್ಟçಪಿತ ಮಹಾತ್ಮಾ ಗಾಂಧಿಜೀಯವರ ಮಾನವ ಬಂಧುತ್ವ ಸಂದೇಶವನ್ನು ಕಾಪಾಡಿಕೊಂಡು ಅಶೋಕ ಚಕ್ರವರ್ತಿಯವರು ನೆಲೆ ನಿಂತ ಸನ್ನತಿಯು ನಮ್ಮ ಸಾಹಿತ್ಯಕ್ಕೆ ಪ್ರೇರಣೆಯನ್ನಾಗಿ ಪಡೆದು ಜನಸಾಮಾನ್ಯರ ಬದುಕಿಗೊಂದು ಅರ್ಥ ನೀಡುವ ದಾರಿದೀಪವಾಗುವ ಹಾಗೂ ಮನುಷತ್ಯ ನಿರ್ಮಸುವ ಸಾಹಿತ್ಯ ಇಂದಿನ ದಿನಮಾನದಲ್ಲಿ ಅತ್ಯಗತ್ಯವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಮುಡಬಿ ಗುಂಡೇರಾವ ಅಭಿಪ್ರಾಯಪಟ್ಟರು.
ಬಡವರ ಶೋಷಿತರ ಬದುಕಿನ ಚಿತ್ರಣ ಬದಲಿಸುವ ಕಾವ್ಯ ಮತ್ತು ಸಾಹಿತ್ಯ ಪ್ರಕಟವಾಗಬೇಕು. ಸಮಕಾಲಿನ ಸನ್ನಿವೇಶಗಳನ್ನು ಸಾಹಿತ್ಯದಲ್ಲಿ ಒಡಮೂಡಬೇಕು, ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸುವ ಗಟ್ಟಿ ಸಾಹಿತ್ಯ ಈ ನೆಲದಿಂದ ಹೊರಹೊಮ್ಮಬೇಕು. ಸಾಹಿತ್ಯಕ್ಕೆ ಯಾವ ಅಡ್ಡಗೋಡೆ, ಯಾವ ಸೀಮೆಯು, ಯಾವ ಇಜಮ್ ಬೇಡ, ಸಮಾಜ ಪರಿವರ್ತನೆಗೆ ಶರಣರ ವಚನಗಳಂತೆ, ದಾಸರ ವಾಣಿಯಂತೆ, ನುಡಿ ಸಾಹಿತ್ಯ ರೂಪಿತಗೊಳ್ಳಬೇಕು. ಸರ್ವ ಜನಾಂಗಕ್ಕೂ ಒಳಿತು ಮಾಡುವ ಸಾಹಿತ್ಯ ಹೊರಹೊಮ್ಮಬೇಕಾಗಿದೆ ಎಂದರು.
ಕಲಬುರಗಿ ಉಪ ರಾಜಧಾನಿ ಘೋಷಿಸಿ: ಕಲಬುರಗಿ ಜಿಲ್ಲೆ ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನವಲ್ಲದೆ ಕಂದಾಯ ವಿಭಾಗವು ಹೌದು. ಪ್ರಾದೇಶಿಕ ಅಸಮಾನತೆ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಲಬುರಗಿ ನಗರವನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಬೇಕು ಮತ್ತು ಪ್ರತಿ ವರ್ಷ ಇಲ್ಲಿಯೆ ಸಚಿವ ಸಂಪುಟ ಸಭೆ ನಡೆಸಿ ಈ ಭಾಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಸಾಹಿತಿ ಮುಡುಬಿ ಗುಂಡೇರಾವ ಸರ್ಕಾರಕ್ಕೆ ಸಲಹೆ ನೀಡಿದರು.
ಹಂಪಿ ಉತ್ಸವದ ಮಾದರಿಯಲ್ಲಿಯೇ ಈ ಭಾಗದಲ್ಲಿ ರಾಷ್ಟ್ರಕೂಟರ ಉತ್ಸವ, ನಾಗಾವಿ ಉತ್ಸವ, ಸನ್ನತಿ ಉತ್ಸವಗಳನ್ನು ಸರ್ಕಾರವೇ ಆಚರಿಸಬೇಕು. ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರದಂತಹ ಅನೇಕ ಅಕಾಡೆಮಿಗಳಿಗೆ ನೇಮಕಾತಿಯಲ್ಲಿ ಸ್ಥಳೀಯರನ್ನು ಆದ್ಯತೆ ನೀಡಬೇಕು. ಡಾ.ಚೆನ್ನಣ್ಣ ವಾಲೀಕಾರ, ಡಾ.ಗೀತಾ ನಾಗಭೂಷಣ, ಡಾ.ಶಾಂತರಸರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಬೇಕು. ವಿಶೇಷವಾಗಿ ಕಲಬುರಗಿ ನಗರದ ರಸ್ತೆಗಳಿಗೆ ಸ್ಥಳೀಯ ಕವಿಗಳ ಹೆಸರಿಡಬೇಕು. ಕಲಬುರಗಿ ನಗರವನ್ನು ಸುಂದರ ನಗರ (ಸ್ಮಾರ್ಟ ಸಿಟಿ)ಯನ್ನಾಗಿ ಮಾಡಬೇಕು. ಜವಳಿ ಪಾರ್ಕ ಬಹುಬೇಗನೇ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಜಾನಪದ ಸಂಗ್ರಹಾಲಯ ಸ್ಥಾಪಿಸಬೇಕು, 371(ಜೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು, ತೊಗರಿ, ಜೋಳ ಬೆಳೆಯುವ ಈ ಭಾಗದ ರೈತರಿಗೆ ಸೂಕ್ತ ಪ್ರೋತ್ಸಾಹ ಮತ್ತು ಬೆಲೆ ಸಿಗಬೇಕು, ಸಿಮೆಂಟ್ ಕಂಪನಿಗಳಲ್ಲಿ ವಿವಿಧ ಉನ್ನತ ಹುದ್ದೆ ಸೇರಿದಂತೆ ಎಲ್ಲ ಹುದ್ದೆಗಳಲ್ಲೂ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಬೇಕು, ಜಿಲ್ಲೆಯ ಎಲ್ಲ ಜೀವ ನದಿಗಳಿಗೆ ಏತ ನೀರಾವರಿ ಮತ್ತು ಫೀಡರ ಲೈನ್(ವಿದ್ಯುತ್ ಸೌಕರ್ಯ) ಒದಗಿಸಬೇಕು, ಜಿಲ್ಲೆಗೆ ಹಾದು ಹೋಗುವ ಎಲ್ಲ ರಸ್ತೆ ಮಾರ್ಗಗಳನ್ನು ರಾಷ್ಟಿçÃಯ ಹೆದ್ದಾರಿಯನ್ನಾಗಿ ಮಾಡಬೇಕು ಎಂದು ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ ಸಲಹೆ ನೀಡಿದರು.

 


ತಾಯಿ ಭಾಷೆಗೆ ಯಾವುದು ಸಾಟಿಯಿಲ್ಲ: ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ನಡುವೆಯೂ ನಮ್ಮ ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಕಲಬುರಗಿ ಭಾಗವು ವಚನ ಸಾಹಿತ್ಯ, ದಾಸ ಸಾಹಿತ್ಯ ಮತ್ತು ತತ್ವಪದಕಾರರ ಬೀಡಾಗಿದ್ದು, ಇಲ್ಲಿನ ಸಾಹಿತ್ಯಿಕ ಮೌಲ್ಯಗಳು ನಾಡಿನಾದ್ಯಂತ ಪಸರಿಸಿವೆ. ಇಂದಿನ ಯುವ ಪೀಳಿಗೆ ಉದ್ಯೋಗದ ಕಾರಣಕ್ಕಾಗಿ ಬೇರೆ ಭಾಷೆಗಳನ್ನು ಕಲಿಯಲಿ, ಆದರೆ ಮಾತೃಭಾಷೆಯನ್ನು ಮರೆಯಬಾರದು. ತಾಯಿ ಮತ್ತು ಮಾತೃಭಾಷೆಗೆ ಜಗತ್ತಿನಲ್ಲಿ ಯಾವುದಕ್ಕೂ ಸಾಟಿಯಿಲ್ಲ ಎಂದು ಹೇಳಿದರು.
ಇನ್ನು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ಅವರು, ಕನ್ನಡಿಗರು ಓದದಿದ್ದರೂ ಕಾವ್ಯ ಪ್ರಯೋUದÀಲ್ಲಿ ಪರಿಣಿತರು ಎಂದು ಕವಿರಾಜಮಾರ್ಗಕಾರ ಅಂದೇ ಸಾರಿದ್ದಾರೆ. ಅಂತಹ ಉನ್ನತ ಪರಂಪರೆಯ ನಾವೆಲ್ಲರೂ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬದುಕಬೇಕಿದೆ. ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಪಂಪರಿAದ ಪ್ರಾರಂಭವಾದ ಸಾಹಿತ್ಯ ಯಾತ್ರೆ ಇಲ್ಲಿಯವರೆಗೂ ನಡೆದುಕೊಂಡು ಬಂದಿದೆ. ಮುಂದೆಯೂ ಸಾಗಲಿದೆ. ಅಧಿಕಾರ ಎಂಬುದು ಕೇವಲ ಆಡಳಿತಕ್ಕಲ್ಲ, ಅದು ಜನರ ಸೇವೆಗೆ ಸಿಕ್ಕ ಅವಕಾಶ. ತನು, ಮನ, ಧನ ಅಹಂಕಾರವಿಲ್ಲದೆ ಜನಸಾಮಾನ್ಯರಂತೆ ಕೆಲಸ ಮಾಡುವವರೇ ನಿಜವಾದ ಶರಣರು ಎಂದು ತಿಳಿಸಿದರು.
ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತಿಗಳಿಗೆ ಮಾತ್ರ ಸೀಮಿತವಾಗದೆ ಸಮಾಜದ ಎಲ್ಲಾ ವರ್ಗದ ಜನರನ್ನು ಕಲಾವಿದರನ್ನು ಮತ್ತು ಸಂಸ್ಕೃತಿಯನ್ನು ಒಗ್ಗೂಡಿಸುವ ಶಕ್ತಿಯಾಗಿ ಬೆಳೆದಿದೆ. ತಮ್ಮ ಅವಧಿಯಲ್ಲಿ ಇದು 5ನೇ ಜಿಲ್ಲಾ ಸಮ್ಮೇಳನ. ಇದರ ಜೊತೆಗೆ 12 ವಿಶೇಷ ಸಮ್ಮೇಳನಗಳನ್ನು ನಡೆಸಿ ಸಾಹಿತ್ಯಿಕ ಜಾಗೃತಿ ಮೂಡಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಜಾತಿ, ಧರ್ಮಗಳ ಜನರನ್ನು ಒಗ್ಗೂಡಿಸುವ ವೇದಿಕೆಯಾಗಿದೆ. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಆಶಯದಂತೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಅದ್ದೂರಿ ಮೆರವಣಿಗೆ: ಸಮ್ಮೇಳನ ಉದ್ಘಾಟನೆ ಮುನ್ನ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಸಮ್ಮೇಳನಾಧ್ಯಕ್ಷ ಮುಡಬಿ ಗುಂಡೇರಾವ ಅವರನ್ನು ಭವ್ಯ ಮೆರವಣಿಗೆಯು ಸರ್ದಾರ ವಲ್ಲಭಭಾಯ್ ಪಟೇಲ್ ಮಾರ್ಗವಾಗಿ ಕನ್ನಡ ಭವನದ ವರೆಗೆ ಸಾಗಿತ್ತು. ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಮತ್ತು ಮೇಯರ್ ವರ್ಷಾ ರಾಜೀವ ಜಾನೆ ಮೆರವಣಿಗೆಗೆ ಚಾಲನೆ ನೀಡಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆಯುದ್ದಕ್ಕೂ ವಿವಿಧ ಜಾನಪದ ಕಲಾತಂಡಗಳ ನೃತ್ಯ, ಜಿಲ್ಲೆಯ ಕಲೆ-ಸಾಹಿತ್ಯ ಪ್ರತಿಬಿಂಬಿಸಿದವು. ನಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ್ ಪಾಟೀಲ ತೇಗಲತಿಪ್ಪಿ ಅವರು ಜಿಲ್ಲಾ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಕನ್ನಡ ಭವನದ ಆವರಣದಲ್ಲಿ ರಾಷ್ಟçಧ್ವಜ ಮತ್ತು ನಾಡ ಧ್ವಜಾರೋಹಣ ನೆರವೇರಿಸಿದರು. ಕಲಬುರಗಿ ತಾಲೂಕು ಕಸಾಪ ಅಧ್ಯಕ್ಷೆ ಶಿವಲೀಲಾ ಎಸ್. ಕಲಗುರ್ಕಿ ಅವರು ಸಾಂಕೇತಿಕವಾಗಿ ಪರಿಷತ್ ಧ್ವಜಾರೋಹಣ ಮಾಡಿದರು.
ಕಾರ್ಯಕ್ರಮದಲ್ಲಿ ಚಿತ್ತಾಪೂರಿನ ಶ್ರೀ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ಅಮರೇಶ್ವರಿ ಬಾಬುರಾವ ಚಿಂಚನಸೂರ, ಖ್ಯಾತ ಉದ್ದಿಮಿದಾರ ಮೋಸಿನ್ ಎಂ. ಪಟೇಲ್, ರಾಜ್ಯ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಜಗನ್ನಾಥ ಶೇಗಜಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳೂಂಡಗಿ, ಸೈಯದ್ ನಜಿರೂದ್ದೀನ್ ಮುತ್ತಾವಲಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳಾದ ಎಸ್. ಬಿರಾದರ, ಸಂತೋಷ ದೇಶಪಾಂಡೆ, ಸಂತೋಷ ಕುಡಳ್ಳಿ, ಸುರೇಶ ಲೇಂಗಟಿ, ವೀರಭದ್ರಪ್ಪ, ಬಸವರಾಜ, ವಲಯ ಅಧ್ಯಕ್ಷರಾದ ಪ್ರಭುಲಿಂಗ ಮತ್ತು ರವಿಕುಮಾರ ಇದ್ದರು. ಶರಣರಾಜ ಛಪ್ಪರಬಂದಿ ಸ್ವಾಗತಿಸಿದರು. ಶಿವರಾಜ ಅಂಡಗಿ ಮತ್ತು ಸಿದ್ದಲಿಂಗ ಜಿ. ಬಾಳಿ ನಿರೂಪಿಸಿದರು. ಧರ್ಮಣ್ಣ ಹೆಚ್. ಧನ್ನಿ ವಂದಿಸಿದರು.
*****

Leave a Reply

Your email address will not be published. Required fields are marked *

error: Content is protected !!