Popular Posts

ಕ್ರೈಸ್ತ ಸಮುದಾಯ ಕಲ್ಯಾಣಕ್ಕೆ 500 ಕೋಟಿ ಬಜೆಟ್ ಮೀಸಲಿಡುವಂತೆ ಮನವಿ

ಬೀದರ್: ಕಳೆದ ವರ್ಷ ಕ್ರೈಸ್ತ ಸಮುದಾಯದ ಕಲ್ಯಾಣಕ್ಕಾಗಿ 250 ಕೋಟಿ ರೂಪಾಯಿಗಳ ಬಜೆಟ್ ಮೀಸಲಿಟ್ಟಿದ್ದ ಸರ್ಕಾರವು, ಈ ಬಾರಿ ಅದನ್ನು 500 ಕೋಟಿ ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷ ಅನೀಲ್ ಜಾಧವ  ಅವರು ಮುಖ್ಯಮಂತ್ರಿ ಸಿದ್ರಾಮಯ್ಯಾ ಅವರಿಗೆ ಮನವಿ ಮಾಡಿದ್ದಾರೆ.

ಕ್ರೈಸ್ತ ಜನಸಂಖ್ಯೆಯ ಅಗತ್ಯಗಳು ಹಾಗೂ ವಿವಿಧ ಯೋಜನೆಗಳ ವ್ಯಾಪ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಜೆಟ್ ಹೆಚ್ಚಳ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ವಿಶೇಷವಾಗಿ ಆರೋಗ್ಯ ಕ್ಷೇತ್ರದಲ್ಲಿ ಉಚಿತ ಚಿಕಿತ್ಸಾ ಯೋಜನೆಗಳು, ಆಸ್ಪತ್ರೆಗಳ ಅಭಿವೃದ್ಧಿ, ಎಂಆರ್‌ಐ ತಂತ್ರಜ್ಞಾನ, ಕಿಡ್ನಿ ಡೈಲಿಸಿಸ್ ಸೇವೆಗಳು ಹಾಗೂ ವಿವಿಧ ಹೆಲ್ತ್ ಕೇರ್ ಯಂತ್ರೋಪಕರಣಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದಲ್ಲದೆ ರಾಜ್ಯದ ಎಲ್ಲಾ ರೆವರೆಂಡ್ ಪಾದ್ರಿಗಳಿಗೆ ತಿಂಗಳ ವೇತನ ವ್ಯವಸ್ಥೆ ಮಾಡಲು ಸುಮಾರು 100 ಕೋಟಿ ರೂಪಾಯಿ ಮೀಸಲಿಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಬಡ ಕ್ರೈಸ್ತರಿಗೆ ಇಸ್ರೇಯಲ್ ಪವಿತ್ರ ಸ್ಥಳಗಳಿಗೆ ಯಾತ್ರೆ ಸೌಲಭ್ಯ ಒದಗಿಸುವುದು ಹಾಗೂ ಹೊಸ ಚರ್ಚ್ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ಅನುದಾನ ನೀಡುವಂತೆ ಕೂಡ ಆಗ್ರಹಿಸಲಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಸತಿ ಸೌಲಭ್ಯ, ತಾಂತ್ರಿಕ ಹಾಗೂ ಉದ್ಯೋಗಮುಖಿ ತರಬೇತಿ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಬಜೆಟ್ ಹೆಚ್ಚಳದಿಂದ ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಹಾಗೂ ಸಮಾಜದ ಎಲ್ಲಾ ವರ್ಗಗಳ ಸಮಾನ ಪ್ರಗತಿಗೆ ಸಹಾಯಕವಾಗುತ್ತದೆ ಎಂದು ಅನೀಲ್ ಜಾಧವ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!