1
1

ಬೀದರ್: ಜಿಲ್ಲೆಯ ಕ್ರೈಸ್ ವಸತಿ ಶಾಲೆಗಳ ಆರನೇ ತರಗತಿಯ ಖಾಲಿ ಉಳಿದ ಸ್ಥಾನಗಳನ್ನು ಕೌನ್ಸೆಲಿಂಗ್ ಮೂಲಕವೇ ಅರ್ಹ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಬೇಕು ಎಂದು ಜೈ ಕರುನಾಡ ವೇದಿಕೆ ಜಿಲ್ಲಾ ಆಡಳಿತವನ್ನು ಆಗ್ರಹಿಸಿದೆ.
ವೇದಿಕೆಯ ಪದಾಧಿಕಾರಿಗಳು ನಗರದಲ್ಲಿ ಗುರುವಾರ ನಿಯೋಗದಲ್ಲಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ ಅವರಿಗೆ ಸಲ್ಲಿಸಿದರು.
ಈಗಾಗಲೇ ಮೊದಲ, ಎರಡನೇ ಮೂರನೇ ಆಯ್ಕೆ ಪಟ್ಟಿ ಹಾಗೂ ವಿಶೇಷ ಪಟ್ಟಿ ಪ್ರಕಟಿಸಿ, ಆಯ್ಕೆಯಾದವರಿಗೆ ಪ್ರವೇಶ ಕಲ್ಪಿಸಲಾಗಿದೆ. ಇನ್ನೂ ಖಾಲಿ ಉಳಿದ ಸ್ಥಾನಗಳಿಗೆ ಹಣ, ವೈಯಕ್ತಿಕ, ರಾಜಕೀಯ ಪ್ರಭಾವಕ್ಕೆ ಮಣಿದು ಕೌನ್ಸೆಲಿಂಗ್ ನಡೆಸದೆ ಪ್ರವೇಶ ಒದಗಿಸಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿವೆ ಎಂದು ದೂರಿದ್ದಾರೆ.
ಈಗಾಗಲೇ ಪ್ರಕಟಿಸಲಾದ ಪಟ್ಟಿಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಖಾಲಿ ಉಳಿದ ಸ್ಥಾನಗಳ ನಿಖರ ಸಂಖ್ಯೆಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಕೌನ್ಸಲಿಂಗ್ಗೆ ಅರ್ಹರಾದ ವಿದ್ಯಾರ್ಥಿಗಳ ಪಟ್ಟಿಯನ್ನು ಮುಂಚಿತವಾಗಿ ಪ್ರಕಟಿಸಿ, ವಿದ್ಯಾರ್ಥಿ ಹಾಗೂ ಪಾಲಕರಿಗೆ ಮಾಹಿತಿ ನೀಡಬೇಕು. ಖಾಲಿ ಇರುವ ಎಲ್ಲ ಸ್ಥಾನಗಳನ್ನು ಜಿಲ್ಲಾಡಳಿತದ ಮೇಲುಸ್ತುವಾರಿಯಲ್ಲಿ ಮೆರಿಟ್ ಆಧಾರದಲ್ಲಿಯೇ ಪಾರದರ್ಶಕವಾಗಿ ಹಂಚಿಕೆ ಮಾಡಬೇಕು. ಯಾವುದಾದರೂ ವಿದ್ಯಾರ್ಥಿಗೆ ಕೌನ್ಸೆಲಿಂಗ್ ಇಲ್ಲದೇ ಪ್ರವೇಶ ಕಲ್ಪಿಸಲಾಗಿದೆಯೇ ಎನ್ನುವುದನ್ನು ಪರಿಶೀಲಿಸಬೇಕು. ಕೌನ್ಸೆಲಿಂಗ್ ಇಲ್ಲದೆ ಪ್ರವೇಶ ಒದಗಿಸಿದ್ದಲ್ಲಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಒತ್ತಾಯಿಸಿದರು.
ವೇದಿಕೆಯ ಜಿಲ್ಲಾ ಅಧ್ಯಕ್ಷ ಗೋಪಾಲ್ ಆರ್.ಕೆ. ನಿಯೋಗದ ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷರಾದ ನಾಗೇಶ ಸ್ವಾಮಿ ಮಸ್ಕಲ್, ಸುರೇಶ ಮಮದಾಪುರಕರ್, ಪ್ರಧಾನ ಕಾರ್ಯದರ್ಶಿ ಡಾ. ಶಿವಕುಮಾರ ಬಿ. ಮತ್ತಿತರರು ಇದ್ದರು.
Subscribe to get the latest posts sent to your email.