1
1

ಬೀದರ್: ಸರ್ಕಾರಿ ಪಾಲಿಟೆಕ್ನಿಕ್ಗಳ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಅತಿಥಿ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಗುರುವಾರ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರನ್ನು ನಿಯೋಗದಲ್ಲಿ ಭೇಟಿಯಾಗಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಅತಿಥಿ ಉಪನ್ಯಾಸಕರಿಗೆ ಕೆಲಸವೇ ಆಧಾರವಾಗಿದೆ. ಬಹಳಷ್ಟು ಜನರ ವಯೋಮಿತಿ ಮೀರುತ್ತಿದೆ. ಹೀಗಾಗಿ ಸರ್ಕಾರ ಹರಿಯಾಣ ಮಾದರಿಯಲ್ಲಿ ಸೇವಾ ಭದ್ರತೆ ಕಲ್ಪಿಸಿ, ಮಾನವೀಯ ನೆಲೆಯಲ್ಲಿ ನೆರವಾಗಬೇಕು ಎಂದು ಬೇಡಿಕೆ ಮಂಡಿಸಿದರು.
ಸದ್ಯ ಅಧಿಸೂಚನೆ ಹೊರಡಿಸಲಾದ 941 ಪಾಲಿಟೆಕ್ನಿಕ್ ಕಾಯಂ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿದರು.
ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರಿಗೆ ಕೃಪಾಂಕ ಹಾಗೂ ವಯೋಮಿತಿಯಲ್ಲಿ ಸಡಲಿಕೆ ಕೊಡುವ ಬಗ್ಗೆ ಚಿಂತನೆ ನಡೆಸುವ ಆಶ್ವಾಸನೆ ನೀಡಿದ್ದಾರೆ. ಆದರೆ, ಸೇವೆ ಕಾಯಂಗೊಳಿಸುವ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ದೊರಕಿಲ್ಲ ಎಂದು ನಿಯೋಗದ ನೇತೃತ್ವ ವಹಿಸಿದ್ದ ಸಂಘದ ರಾಜ್ಯ ಅಧ್ಯಕ್ಷ ಪ್ರವೀಣಕುಮಾರ ಮೀರಾಗಂಜಕರ್ ಅತೃಪ್ತಿ ಹೊರ ಹಾಕಿದರು.
ಸೇವೆ ಕಾಯಂ ಸಂಘದ ಪ್ರಮುಖ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರುವವರೆಗೆ ಸಂಘ ಹೋರಾಟ ನಡೆಸಲಿದೆ. ಶೀಘ್ರದಲ್ಲೇ ರಾಜ್ಯಮಟ್ಟದಲ್ಲಿ ಸಭೆ ನಡೆಸಿ, ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು. ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ನಿತೀಶ್ ಕಾರಬಾರಿ, ತೋರಣೆ ಪ್ರವೀಣಕುಮಾರ, ಗೋವಿಂದ ನಾಯ್ಕ್, ಸಂದೀಪ್ ಕುಲಕರ್ಣಿ, ಆಶೀಶ್ ಸೇಳಕೆ, ಪುಷ್ಪರಾಜ ಖರಟ್, ಗೋದಾವರಿ, ಅಶ್ವಿನಿ, ಹುಸ್ನ ಜಬೀನ್, ಅಂಬಿಕಾ, ನಜ್ಮಾ ಆಫ್ರೀನ್, ಪೂರ್ಣಿಮಾ ಸ್ವಾಮಿ, ಪೂರ್ಣಿಮಾ ಜಮಗಿ, ಶಾಂತಕುಮಾರ, ಬಾಲಾಜಿ, ಅಭಿಷೇಕ ಮತ್ತಿತರರು ಇದ್ದರು.
Subscribe to get the latest posts sent to your email.