1
1

ಔರಾದ್ :ಫೆ.14: ತಾಲ್ಲೂಕಿನ ಆಲೂರ(ಬಿ) ಗ್ರಾಮದ ಯೋಧ ರಾಜು ಮಲಗೊಂಡ ಕಾಳೆ ಸತತವಾಗಿ 24 ವರ್ಷ 12 ದಿನಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಬೀದರ್ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಯೋಧನಿಗೆ ಸ್ವಗ್ರಾಮದ ಯುವಕರು ಜಾಥಾ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
ರೈಲ್ವೆ ನಿಲ್ದಾಣದಲ್ಲಿ ಆರತಿ ಎತ್ತಿ ಹೂಮಳೆ ಸುರಿಸಿ, ಶಾಲು ಹೋದಿಸಿ ಸನ್ಮಾನಿಸಿ ಆತ್ಮೀಯವಾಗಿ ಬರಮಾಡಿಕೊಂಡ ಯುವಕರು ಬಳಿಕ ಬೈಕ್ ಜಾಥಾ ಮೂಲಕ ಜಯಘೋಷಗಳೊಂದಿಗೆ ಊರಿಗೆ ಕರೆತಂದು ಶಾಲು ಹೋದಿಸಿ ಸನ್ಮಾನಿಸಿದರು.
ಇದೇ ವೇಳೆ ಹಳೆ ಸ್ನೇಹಿತ ಸಲಾವೊದ್ದಿನ್ ಮಾತನಾಡಿ, ಯೋಧರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಗಾಳಿ, ಬಿಸಿಲು, ಮಳೆ ಎನ್ನದೆ ದೇಶಕ್ಕಾಗಿ ಶ್ರಮ ವಹಿಸುತ್ತಾರೆ. ಗಡಿಯಲ್ಲಿ ನಮ್ಮನ್ನು ಕಾಯ್ದು ನಿವೃತ್ತಿ ಹೊಂದಿ ಸಾಮಾಜಿಕ ಜೀವನದಲ್ಲಿ ಭಾಗವಹಿಸುತ್ತಾರೆ. ಅವರ ನಿವೃತ್ತ ಜೀವನ ಸುಖಕರವಾಗಿರಲಿ. ಸಾರ್ವಜನಿಕರು ಹಾಗೂ ದೇಶಭಕ್ತರು ಅವರ ಜೊತೆ ಉತ್ತಮ ಬಾಂದವ್ಯ ಹೊಂದಬೇಕು ಎಂದು ಹೇಳಿದರು.
ಗ್ರಾಮಸ್ಥರಿಂದ ಗೌರವ ಸ್ವೀಕರಿಸಿ ಮಾತನಾಡಿದ ಯೋಧ ರಾಜು ಕಾಳೆ , ಕಳೆದ 24 ವರ್ಷಗಳ ಕಾಲ ದೇಶದ ಹಲವು ಗಡಿಗಳಲ್ಲಿ ಸಾವು ನೋವು ಬದಿಗಿಟ್ಟು, ದೇಶಕ್ಕಾಗಿ ಹಗಲಿರುಳು ಕರ್ತವ್ಯ ನಿರ್ವಹಿಸಿದ ನನಗೆ ಗ್ರಾಮಸ್ಥರು ಹಾಗು ಗೆಳೆಯರು ತೋರಿದ ಅಭಿಮಾನ ಸಾರ್ಥಕತೆ ತಂದಿದೆ ಎಂದರು.ಈ ಸಂಧರ್ಭದಲ್ಲಿ ಮಹೇಶ, ಸಂತೋಷ, ಸಂಜು ಸೇರಿದಂತೆ ಇತರರಿದ್ದರು.