1
1

ಬೀದರ್: ವಿಧಾನಸೌಧದ ನಿಗದಿತ ಸ್ಥಳದಲ್ಲೇ ಮಾಧ್ಯಮ ಪ್ರತಿನಿಧಿಗಳು ಜನಪ್ರತಿನಿಧಿಗಳ ಹೇಳಿಕೆ ಪಡೆಯಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿರುವುದನ್ನು ಜಿಲ್ಲಾ ಸ್ಯಾಟ್ಲೈಟ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ.
ಅಸೋಸಿಯೇಷನ್ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ನಿಯೋಗದಲ್ಲಿ ಈ ಕುರಿತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಿಧಾನಸೌಧವು ಜನಪ್ರತಿನಿಧಿಗಳು ಜನರ ಪರವಾಗಿ ಚರ್ಚೆ ನಡೆಸುವ ಸ್ಥಳವಾಗಿದೆ. ಹೀಗಾಗಿ ಅಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರುವುದು ಸರಿಯಾದ ಕ್ರಮವಲ್ಲ. ಇದು, ಅಭಿವ್ಯಕ್ತಿ ಸ್ವಾತಂತ್ರ್ಯದ ನಡೆಸಿದ ಪ್ರಹಾರ ಎಂದು ಅಸೋಸಿಯೇಷನ್ ಅಧ್ಯಕ್ಷ ಮಲ್ಲಿಕಾರ್ಜುನ ಮರಕಲೆ ಸಭಾಪತಿ ಅವರ ಗಮನ ಸೆಳೆದರು.
ಪತ್ರಿಕಾ ರಂಗ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ. ಸರ್ಕಾರದ ಆದೇಶವು ಮಾಧ್ಯಮದ ಸ್ವಾತಂತ್ರ್ಯ ಹಾಗೂ ಪಾರದರ್ಶಕತೆಗೆ ಅಡ್ಡಿ ಉಂಟು ಮಾಡಲಿದೆ ಎಂದು ತಿಳಿಸಿದರು.
ಕೂಡಲೇ ಮಾಧ್ಯಮಕ್ಕೆ ವಿಧಿಸಿದ ನಿರ್ಬಂಧ ಹಿಂಪಡೆಯಬೇಕು. ವಿಧಾನಸೌಧ, ವಿಕಾಸ ಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮುಕ್ತ ಪ್ರವೇಶ ಕಲ್ಪಿಸಬೇಕು ಎಂದು ಬೇಡಿಕೆ ಮಂಡಿಸಿದರು.
ವಿಧಾನ ಪರಿಷತ್ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಬಸವರಾಜ ಹೊರಟ್ಟಿ ಭರವಸೆ ನೀಡಿದರು.
ಅಸೋಸಿಯೇಷನ್ ಗೌರವಾಧ್ಯಕ್ಷ ರಾಜಕುಮಾರ ಸ್ವಾಮಿ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ನಾಗರಾಳ, ಉಪಾಧ್ಯಕ್ಷರಾದ ರಾಮಕೃಷ್ಣ, ಸಂಜುಕುಮಾರ ಬುಕ್ಕಾ, ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯ್ಕ್, ಕಾರ್ಯದರ್ಶಿಗಳಾದ ಶಿವಾನಂದ ಮಡಗೋಳ್, ನಂದಕುಮಾರ ಕರಂಜಿ, ಹಿರಿಯ ಸಲಹೆಗಾರರಾದ ಅನಿಲಕುಮಾರ ದೇಶಮುಖ, ಓಂಕಾರ ಮಠಪತಿ, ಮಾಧ್ಯಮ ಸಲಹೆಗಾರ ದುರ್ಗಪ್ಪ ಹೊಸಮನಿ, ಸದಸ್ಯರಾದ ಪರಶುರಾಮ, ಆಕಾಶ್, ಅಂಬ್ರೇಶ್ ಸ್ವಾಮಿ, ಶಿವಯ್ಯ ಮಠಪತಿ, ರಾಜಕುಮಾರ ಕಲ್ಲಾ, ಅತೀಫ್, ಭರತ, ಪವನ್ ಶರಣು ಸ್ವಾಮಿ ಇದ್ದರು.