ಬೀದರ್: KALIYUGADKOOGU– ಬಸವಕಲ್ಯಾಣದ ಅನುಭವ ಮಂಟಪದಿಂದ ವಿಧಾನಸೌಧದ ವರೆಗೆ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾದ ಹೋರಾಟ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಸಂಗಮೇಶ ಭಾವಿದೊಡ್ಡಿ ಅವರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ಅಂಗವಿಕಲರ ಹಕ್ಕಿನ ಹೋರಾಟವಾಗಿದ್ದು, ಸರ್ಕಾರ ಅಂಗವಿಕಲರಿಗೆ “ವಿಶೇಷ ಚೇತನರು” ಎಂಬ ನಾಮಕರಣ ನೀಡಿದರೂ, ಅವರಿಗೆ ಅಗತ್ಯವಾದ ವಿಶೇಷ ಅನುದಾನ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಒದಗಿಸಿಲ್ಲ ಎಂದು ಆರೋಪಿಸಿದರು. ಈ ಹೋರಾಟವು ಯಾವುದೇ ಒಂದು ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ, ಕರ್ನಾಟಕ ರಾಜ್ಯದ ಎಲ್ಲಾ ವಿಶೇಷ ಚೇತನರ ಹಕ್ಕಿಗಾಗಿ ನಡೆಯುತ್ತಿರುವ ಸಾಮೂಹಿಕ ಹೋರಾಟವಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ, ಫೆಬ್ರವರಿ 23ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ “ಅಂಗವಿಕಲರ ನಡೆ – ರಾಜಕೀಯದ ಕಡೆ” ಎಂಬ ಶೀರ್ಷಿಕೆಯಲ್ಲಿ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಪ್ರತಿಭಟನೆ ನಡೆಯಲಿದ್ದು, ರಾಜ್ಯದ ಮೂಲೆಮೂಲೆಗಳಿಂದ ವಿಶೇಷ ಚೇತನರು ಭಾಗವಹಿಸಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಕು.ಮಂಗಲಾ ಮರಕಲೆ, ಎಂ ಆರ್ ಡಬ್ಲ್ಯೂ ಹಾಗೂ ವಿ ಆರ್ ಡಬ್ಲ್ಯೂ ಕಾರ್ಯಕರ್ತರಾದ ಗುರುನಾಥ ರೆಡ್ಡಿ ಚಿಂತಕಿ, ಬಾಬುರಾವ ರಾಠೋಡ, ಜಗನ್ನಾಥ, ಶಿವಕುಮಾರ ಪಾಟೀಲ್, ಬಂಡೆಪ್ಪ ಮಾಳಿ, ಶಿವಲಿಂಗ, ಅನಿತಾ, ಶಿಲ್ಪಾ, ಶಶಿಕಲಾ, ಪ್ರತಾಪ, ಗುರಮ್ಮ, ಮಂಗಲಾ ಸ್ವಾಮಿ ಹಾಗೂ ಇತರರಿದ್ದರು.
Discover more from ಕಲಿಯುಗದ ಕೂಗು
Subscribe to get the latest posts sent to your email.