ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ “ಆಸರೆ” ಎಂಬ ವಿನೂತನ ಸಮುದಾಯ ಪೊಲೀಸ್ ಉಪಕ್ರಮವನ್ನು ರಾಜ್ಯದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರು ಮತ್ತು ವಯೋವೃದ್ಧ ಹಿರಿಯ ನಾಗರಿಕರಿಗೆ ಅನುಷ್ಠಾನಗೊಳಿಸಲಾಗಿದೆ. ಅವರ ಜೀವನದಲ್ಲಿ ಕಂಡುಬರುವ ಒಂಟಿತನ, ಅಸುರಕ್ಷತೆ, ಅಭದ್ರತೆ ಹಾಗೂ ಕಾಳಜಿಯ ಕೊರತೆಯನ್ನು ನೀಗಿಸಿ, ಅವರಿಗೆ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮದ ವಿಶ್ವಾಸವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. “ಆಸರೆ” ಯೋಜನೆಯ ಮೂಲಕ ಅವರು ಒಂಟಿಯಲ್ಲ, ಅವರೊಂದಿಗೆ ಪೊಲೀಸ್ ಇಲಾಖೆ ಹಾಗೂ ಸರ್ಕಾರವಿದೆ ಎಂಬ ಬಲವಾದ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಮೂಡಿಸಲಾಗುತ್ತಿದೆ.
ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹುಮನಾಬಾದ ಉಪ-ವಿಭಾಗದ ಉಪಾಧೀಕ್ಷಕರಾದ ಶ್ರೀ ಮಡೋಳಪ್ಪಾ ಪಿ.ಎಸ್ ರವರು ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರು ಮತ್ತು ವಯೋವೃದ್ಧ ಹಿರಿಯ ನಾಗರಿಕರ ಕುಂದು-ಕೊರತೆಗಳನ್ನು ಆಲಿಸಿ “ಆಸರೆ” ಯೋಜನೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
“ಆಸರೆ” ಪೊಲೀಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶ್ರಮಿಸುತ್ತಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದ್ದು, ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರು ಮತ್ತು ವಯೋವೃದ್ಧ ಹಿರಿಯ ನಾಗರಿಕರು ಈ ಯೋಜನೆಯ ಅನುಷ್ಠಾನಕ್ಕೆ ಸಹಕರಿಸಲು ಕೋರಲಾಗಿದೆ.ಪ್ರದೀಪ್ ಗುಂಟಿ, ಐ.ಪಿ.ಎಸ್.ಪೊಲೀಸ್ ವರಿಷ್ಠಾಧಿಕಾರಿಗಳುಬೀದರ ಜಿಲ್ಲೆ, ಬೀದರ.