1
1

ಬೀದರ್: ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ನಗರದಲ್ಲಿ ನಡೆಸಿದ್ದ ಪ್ರತಿಭಟನೆ ವೇಳೆ ಕೆಲ ಅಂಗಡಿಗಳ ನಾಮಫಲಕಗಳಿಗೆ ಹಾನಿಯಾದ ಪ್ರಕರಣದಲ್ಲಿ ಇಲ್ಲಿಯ ನ್ಯಾಯಾಲಯವು ತನ್ನನ್ನು ಸೇರಿದಂತೆ ಐವರು ಕನ್ನಡ ಪರ ಹೋರಾಟಗಾರರನ್ನು ದೋಷಮುಕ್ತಗೊಳಿಸಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ತಿಳಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರು ಸೋಮನಾಥ ಮುಧೋಳ, ಜಗದೀಶ್ ಬಿರಾದಾರ, ಅನಿಲ್ ಹೇಡೆ, ವೀರಶೆಟ್ಟಿ ಗೌಸಪುರ ಹಾಗೂ ಸಚಿನ್ ಬೆನಕನಳ್ಳಿ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ ಎಂದು ಹೇಳಿದ್ದಾರೆ.
ವೇದಿಕೆಯ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡರ ಮಾರ್ಗದರ್ಶನದಲ್ಲಿ ವೇದಿಕೆಯ ಜಿಲ್ಲಾ ಘಟಕದಿಂದ ನಗರದ ಮೋಹನ್ ಮಾರ್ಕೆಟ್ ಪ್ರದೇಶದಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಒತ್ತಾಯಿಸಿ 2024 ರ ಮಾರ್ಚ್ 5 ರಂದು ಪ್ರತಿಭಟನೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ನಾಮಫಲಕಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ನ್ಯೂಟೌನ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದ್ದಾರೆ.
ವಕೀಲ ಕೇಶವರಾವ್ ಶ್ರೀಮಾಳೆ ಅವರು ಪ್ರಕರಣದಲ್ಲಿ ವೇದಿಕೆಯ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. 2007 ರಿಂದಲೂ ಅವರು ಕನ್ನಡ ಪರ ಹೋರಾಟಗಾರರಿಗೆ ಉಚಿತ ಕಾನೂನು ಸೇವೆ ಒದಗಿಸುತ್ತಿದ್ದಾರೆ. ಅವರಿಗೆ ವೇದಿಕೆಯಿಂದ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
Subscribe to get the latest posts sent to your email.